ಗುರುವಾರ, ಅಕ್ಟೋಬರ್ 20, 2011

ಕರ್ ನಾಟಕ - ಘಟನಾವಳಿಗಳ ವೈಭವೀಕರಣ



ಜನ ಲೋಕಪಾಲ್ ಬಿಲ್ ಗಾಗಿ ಒತ್ತಾಯಿಸಿ ನಡೆದ ಭ್ರಷ್ಟಾಚಾರ ವಿರೋಧಿ ಚಳುವಳಿಯನ್ನ ಸಮೂಹ "ಸನ್ನಿ"  ಅಂತ ಕೆಲ ಜನ ಕರೆದರು. ಆದರೆ ರಾಜ್ಯದಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಪ್ರಹಸನ ಗಳನ್ನು ಯಾವ ಸನ್ನಿ ಅಂತಾರೆ? ನಟ ದರ್ಶನ್ ಪ್ರಹಸನದಿಂದ ಹಿಡಿದು ಯಡಿಯೂರಪ್ಪ ಕೋರ್ಟ್ ಗೆ ಅಲೆದಾಡಲು ಶುರುವಾದ ದಿನದಿಂದ ಇಂದಿನವರೆಗೆ ಬಿಟ್ಟು ಬಿಡದೆ ಹಿಂಬಾಲಿಸುತ್ತಿರುವುದು ಯಾರು? ಯಾಕೆ ಈ ವೈಭವೀಕರಣ? 


ನಿನ್ನೆ ಬಿಜೆಪಿಯ ಧನಂಜಯಕುಮಾರ್ ಸಿಎನ್ ಎನ್ ಐಬಿಎನ್ ವಾಹಿನಿಯಲ್ಲಿ ನಡೆದ ಚರ್ಚೆಯ ವೇಳೆ ರಾಜ್ ದೀಪ್ ಸರ್ದೇಸಾಯಿ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದರು. ಯಡ್ಯೂರಪ್ಪನವರನ್ನು ಕವರೇಜ್ ಮಾಡಿದ ರೀತಿಯಲ್ಲಿ ನೀವು ಸೋನಿಯಾಗಾಂಧಿ ಯವರನ್ನು ಯಾಕೆ ಕವರೇಜ್ ಮಾಡಲಿಲ್ಲ


ಸೋನಿಯಾಗಾಂಧಿ ಚಿಕಿತ್ಸೆ ಗಾಗಿ ಅಮೇರಿಕದ ಒಂದು ಆಸ್ಪತ್ರೆಗೆ ದಾಖಲಾಗಿದ್ದ ಸಂಧರ್ಭದಲ್ಲಿ  ಇಂತಹ ಆಸಕ್ತಿ ಯಾರು ವಹಿಸಿರಲಿಲ್ಲ. ಅವರಿಗೆ ಯಾವ ಕಾಯಿಲೆ ಇತ್ತು, ಯಾವ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದರು ಈಗ ಹೇಗಿದ್ದಾರೆ ಅಂತ ಯಾವುದೇ ವಿಷಯಗಳಬಗ್ಗೆ ಚರ್ಚಿಸಲೇ ಇಲ್ಲ ಮತ್ತು ಜನರಿಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪ್ರಯತ್ನ ಮಾಡಲೇ ಇಲ್ಲ.  ದೇಶದ ಮಹಾನ್ನಾಯಕಿಯ ಬಗ್ಗೆ ಪ್ರಜೆಗಳಿಗೆ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಸುಮ್ಮನಾಗಿದ್ದೀರ? 


ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ದಿನ, ಶರಣಾಗತಿಯ ಸಂಧರ್ಭ, ಆಸ್ಪತ್ರೆ ಪ್ರಹಸನ,   ಕೆಲ ಮಾಧ್ಯಮಗಳು  ಪುಟಗಟ್ಟಲೆ ಪ್ರಕಟವಾದ, ಗಂಟೆಗಟ್ಟಲೆ ಪ್ರಸಾರವಾದ ಮಾಹಿತಿಗಳು, ಸತತ ಚರ್ಚೆಗಳು  ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮದ ಪರಿಯನ್ನು ನೋಡಿದರೆ, ಇದು ಯಡ್ಯೂರಪ್ಪನವರ ತೇಜೋವಧೆ ಅಲ್ಲವೆ ಅಂತ ಯಡ್ಯೂರಪ್ಪರವರ ಪರವಾಗಿರುವ ಮಂತ್ರಿಗಳು ಗೋಳಿಟ್ಟಿದ್ದಾರೆ. ರೇಣುಕಾಚಾರ್ಯರನ್ನು ಸುವರ್ಣ ಟಿವಿಯ ಚರ್ಚೆಗೆ ಆಹ್ವಾನಿಸಿದ್ದಾಗ, ವೈಯುಕ್ತಿಕ ಕಾರಣಗಳನ್ನು ಹೇಳಿ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದಾರೆ. ಮಾಧ್ಯಮಗಳ ವರ್ತನೆಗೆ ಬೇಸತ್ತು ಯಡಿಯೂರಪ್ಪ ವಿಕ್ಟೋರಿಯ ಆಸ್ಪತ್ರೆ ಯಿಂದ ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಹಟ ಹಿಡಿದು ಹೋಗಿದ್ದಾರೆ ಅಂತ ಅಂದರು.


ಮತ್ತೆ ಕೆಲ ಬಿಜೆಪಿಯ ಮುಖಂಡರು ಗಳು ಹಲವಾರು ಪ್ರಶ್ನೆಗಳೆನ್ನಿತ್ತಿದ್ದಾರೆ,  ಓಟಿಗಾಗಿ ಲಂಚ ಪ್ರಕರಣದಲ್ಲಿ ಮುಖ್ಯ ಪಾತ್ರಧಾರಿ ಬಗ್ಗೆ ಯಾಕೆ ಕುಟುಕು ಕಾರ್ಯಾಚರಣೆ ನಡೆದಿಲ್ಲ? ಪ್ರಕರಣ ಬಯಲಿಗೆಳೆದವರನ್ನು  ಬಂಧಿಸಿ ವಿಚಾರಣೆ ನಡೆಸುತ್ತಿರುವ ಈ ಸಮಯದಲ್ಲಿ ಮುಖ್ಯ ಪಾತ್ರದಾರಿ ಹಾಗು ಹಣ ಪಡೆದವರ ಬಗ್ಗೆ ಯಾಕೆ ಮೃದು ಧೋರಣೆ?


ಡಾ.ಸುಬ್ರಮಣ್ಯಂ ಸ್ವಾಮಿ ಮನೆಯ ಮೇಲೆ ದಾಳಿನಡೆಸಿದವರು ಯಾರು? ಅದರ ಬಗ್ಗೆ ಚರ್ಚೆ ಯಾಕಿಲ್ಲ?


ಡಿನೋಟಿಫಿಕೇಶನ್ ಪ್ರಕರಣ ಕೇವಲ ಯಡಿಯೂರಪ್ಪನವರ ಕಾಲದಲ್ಲಿ ಮಾತ್ರ ಆಗಿಲ್ಲ, ಎಲ್ಲರ ಕಾಲದಲ್ಲೂ ಆಗಿದೆ ಅದರ ಬಗ್ಗೆ ಚರ್ಚೆ ಯಾಕಾಗುತ್ತಿಲ್ಲ? ಗಣಿ ಲೈಸೆನ್ಸ್ ಹಂಚಿಕೆ ಇಂದು ನಿನ್ನೆಯದಲ್ಲ ಮತ್ತು ಅಕ್ರಮಗಣಿಕಾರಿಕೆ ಕಳೆದ ಒಂದು ದಶಕದಿಂದ ನಡೀತಾ ಯಿದೆ. ಕೇವಲ ಇಂದಿನ ಸರ್ಕಾರದ ಮೇಲೆ ಮಾತ್ರ ಯಾಕೆ ಈ ಪರಿ ಮುಗಿಬಿದ್ದು ಕಾಡುತಿದ್ದೀರಿ?


ರಾಜ್ಯದ ವಿದ್ಯುತ್ ಅಭಾವಕ್ಕೆ ತೆಲಂಗಾಣ ಬಿಕ್ಕಟ್ಟು ಅಂತ ಗೊತ್ತಿದ್ದರು ವಿನಾಕಾರಣ ಸರ್ಕಾರದ ಮೇಲೆ ಮುಗಿ ಬಿದ್ದಿರಲ್ಲ!  ಇದರಲ್ಲ್ಲಿ ಕೇಂದ್ರ ಸರ್ಕಾರದ ಜವಬ್ದಾರಿಯಿರಲಿಲ್ಲವೇ? ರಾಯಚೂರು ವಿದ್ಯುತ್ ಘಟಕಕ್ಕೆ ಕಲ್ಲಿದ್ದಲು ಪೂರೈಕೆ ಆಗುತ್ತಿರುವುದು ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಅಲ್ಲವೆ, ಆಂದ್ರ್ಹಪ್ರದೇಶದಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ರಾಜ್ಯ ಸರ್ಕಾರ ಕಾರಣವೇ?


ಯಡಿಯೂರಪ್ಪ ಅಧಿಕಾರಕ್ಕೇರಿದಾಗಿನಿಂದ ಬೆನ್ನು ಬಿಡದ ಬೇತಾಳದಂತೆ ಒಂದಲ್ಲ ಒಂದು ಸಮಸ್ಯೆಗಳು ಬಂದವು ಅದನ್ನೆಲ್ಲ ವೈಭವೀಕರಿಸಿ ರಾಜ್ಯದ ಜನತೆಗೂ ಮುಜುಗರ ಹಾಗು ದೇಶದಲ್ಲಿ ರಾಜ್ಯದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣ ಕರ್ತರು ಯಾರು ಚರ್ಚುಗಳ ಮೇಲೆ ದಾಳಿ, ರೈತರ ಮೇಲೆ ಗೋಲೀಬಾರ್, ನೈಸ್ ರಸ್ತೆ ಹೋರಾಟ, ಅಕ್ರಮ ಗಣಿಗಾರಿಕೆ, ಭೂಹಗರಣ, ಡಿ ನೋಟಿಫಿಕೇಶನ್, ಭಿನ್ನಮತ ಪ್ರಹಸನ, ಪಕ್ಷ ವಿರೋಧಿಗಳು ಸರ್ಕಾರ ಬೀಳಿಸಲು ಮಾಡಿದ ಹರ ಸಾಹಸಗಳು, ಏಕಪಕ್ಷೀಯವಾದ ಲೋಕಾಯುಕ್ತವರದಿ, ಸರ್ಕಾರ ವಜಾಕ್ಕೆ ರಾಜ್ಯಪಾಲರ ಶಿಫಾರಸುಗಳು. ಬಹುಶಃ ಇದುವರೆವಿಗೂ ರಾಜ್ಯವನ್ನಾಳಿದ ಯಾವ ಮುಖ್ಯಮಂತ್ರಿ ಗೂ ಇಷ್ಟೊಂದು ಸಮಸ್ಯೆಗಳು ಎದುರಾಗಿರಲಿಲ್ಲ.  ಇದು ನೀವು ಮಾಡುತ್ತಿರುವುದು ಕೇವಲ ಯಡ್ಯೂರಪ್ಪನ ವಿರುದ್ಧವೋ ಅಥವ ಬಿಜೆಪಿಯ ವಿರುದ್ದವೋ? ಬಿಜೆಪಿಯ ಬೆಳವಣಿಗೆ ಯನ್ನು ಸಹಿಸಲಾರದೆ ಸೋತು ಸುಣ್ಣವಾಗಿರುವ ನೀವು ನೇರವಾಗಿ ನಮ್ಮನ್ನು ಎದುರಿಸದೆ ಹೀಗೆ ನಮ್ಮನ್ನು ಖೆಡ್ಡಾಗೆ ಬೀಳಿಸಲು ಇನ್ನಿಲ್ಲದ ಹರಸಾಹಸ ಮಾಡುತ್ತಿರುವ ನೀವು ಯಾರ ಜತೆ ಕೈ ಜೋಡಿಸಿದ್ದೀರಿ? ನಿಮಗೆ ಸಾಥ್ ಕೊಡುತ್ತಿರುವವರು ಯಾರು ಎಂದು ಜನರಿಗೆ ಸಹ ಗೊತ್ತಾಗುತ್ತಿದೆ

ಈ ತರಹ ಮೇಲಿನ ಪ್ರಶ್ನೆ ಗಳನ್ನು ಬಿಜೆಪಿ ಮುಖಂಡರು ಎತ್ತಿದ್ದಾರೆ. ಬಿಜೆಪಿ ಯೊಳಗೆ ನೂರಾರು ಗೊಂದಲ. ವಿರೋಧಿ ಬಣಗಳು ಮತ್ತು ಕಾಣದ ಕೈಗಳು ಏನೇನಲ್ಲ ಷಡ್ಯಂತ್ರ ರೂಪಿಸು ತಿದ್ದಾರೆ ಎಂದು ಆರೋಪಿಸುತಿದ್ದಾರೆ. ಜನರು ಸಹ ಎಲ್ಲವನ್ನು ಮೂಖ ಪ್ರೆಕ್ಷಕರಾಗಿ ನೋಡ್ತಾಯಿದ್ದಾರೆ. 

*******************
ಮಾಜಿ ಮುಖ್ಯಮಂತ್ರಿಗಳು ಜಯದೇವ ಆಸ್ಪತ್ರೆ ಯಲ್ಲಿ ೪೦ ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಅಂತ ವರದಿಯಾಗಿದೆ. ಅದು ನಡೆದ ಮರುದಿನವೇ ಕುಮಾರಸ್ವಾಮಿಯವರ  ದ್ವಿಪತ್ನಿತ್ವ ಆರೋಪದ ಮೇಲೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ವಾಹಿನಿಯೊಂದರಲ್ಲಿ ಈ ಬಗ್ಗೆ ಮಾಹಿತಿ ಪ್ರಸಾರ ವಾದಾಗ ಅದು ಅವರ ವೈಯುಕ್ತಿಕ ವಿಷಯವಾಗಿದ್ದು ಮುಕ್ತವಾಗಿ ಚರ್ಚೆ ನಡೆಸುವ ಅಗತ್ಯವಿಲ್ಲ. ಒಂದು ವೇಳೆ ಹೈಕೊರ್ಟ್ ಅರ್ಜಿಯನ್ನು ಮಾನ್ಯ ಮಾಡದೆ ಇದ್ದಲ್ಲಿ ಅರ್ಜಿದಾರರಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ ತಳ್ಳಿ ಹಾಕುವ ಆಗಿಲ್ಲ ಎಂದು ಹೇಳಿದರು. ಇದರ ಲಾಭ ಪಡೆದು ಕುಮಾರಸ್ವಾಮಿಯವರು ಮಾನನಷ್ಟ ಮೊಕದ್ದಮೆ ಯನ್ನು ಸಹ ಹೂಡ ಬಹುದು ಎಂದು ವಾಹಿನಿಯವರು ತೀರ್ಪು ನೀಡಿದ್ದಾರೆ. ಇದನ್ನು ನೋಡಿದ ದರ್ಶನ್ ಅಭಿಮಾನಿಗಳು ದರ್ಶನ್ ಪ್ರಕರಣದಲ್ಲಿ ನೀವು ಇದೇ ರೀತಿ ತೀರ್ಪು ಕೊಟ್ಟಿದ್ದಿರಾ? ಕುಮಾರಸ್ವಾಮಿಯವರು ಪ್ರಭಾವಿ ವ್ಯಕ್ತಿ ಯಾಗಿದ್ದು ಅವರ ಬಗ್ಗೆ ಜಾಗೃತೆ ವಹಿಸಿ ಮಾತನಾಡಿದ್ದೀರಿ ಯಾಕೆಂದರೆ ತಮ್ಮ ಹೆಗಲ ಮೇಲೆ ಹೋಗ್ಲಿಬಿಡಿ ಬ್ರದರ್ ಅದು ನನ್ನ ಪರ್ಸನಲ್ ಮ್ಯಾಟರ್ ಅಂದಿದ್ದಾರೆ ಅಂತಾನ? ದರ್ಶನ್ ಗೆ ಆಗಿದ್ದು ಸಹ ವೈಯುಕ್ತಿಕ ತೊಂದರೆಗಳು, ಯಾವುದೋ ಕೆಟ್ಟ ಗಳಿಗೆಯಿಂದ ನಡೆಯಬಾರದ್ದು ನಡೆದುಹೋಗಿದೆ. ಅವರ ತೇಜೋವಧೆ ಮಾಡಲು ಯತ್ನಿಸಿದ್ದು ಯಾರು.  ಆದರೆ ಕುಮಾರಸ್ವಾಮಿ ಯವರು ನಾಡಿನ ಮುಖ್ಯಮಂತ್ರಿ ಯಾಗಿದ್ದವರು ನಾಡಿನ ಪ್ರಜೆಗಳಿಗೆ ದರ್ಶನ್ ಗಿಂತ ಅವರು ಮಾದರಿಯಾಗಬಲ್ಲರು. ಹಾಗೆ ನೋಡಿದರೆ ನಿಯತ್ತು ಮತ್ತು ನೇಮ ಪ್ರಶ್ನೆ ಕುಮಾರಸ್ವಾಮಿಯವರಿಗೆ ಎದುರಾಗಬೇಕು ಎಂದಿದ್ದಾರೆ. ಒಂದು ಕಣ್ಣಿಗೆ ಸುಣ್ಣ ಮತ್ತು ಇನ್ನೊಂದು ಕಣ್ಣಿಗೆ ಯಾಕೆ ಬೆಣ್ಣೆ ಇಡುತಿದ್ದೀರ? ಹೀಗೆಕೆ ಎಂದು ಪ್ರಶ್ನೆಯೆತ್ತಿದ್ದಾರೆ.
**************
ಬಹುಶಃ ಯಾವ ಸರ್ಕಾರದಲ್ಲೂ ಇಷ್ಟೊಂದು ಹಗರಣಗಳು, ಕೆಸೆರೆರಚಾಟಗಳೂ, ಒಂದಾದ ಮೇಲೋಂದು ಕೇಸ್ ಗಳು ಯಾರನ್ನು ಬಿಡದೆ ಕಾಡುತ್ತಿರುವ ನ್ಯಾಯಲಯಗಳು ರಾಜಕೀಯ ವ್ಯವಸ್ಥೆ ಸುಧಾರಣೆಗೆ ಒಳ್ಳೆ ನಾಂದಿ ಆಡಿವೆ. ಹಾಗೆ ಚುನಾವಣೆ ವ್ಯವಸ್ಥೆ ಸಹ ಸುಧಾರಣೆಯಾದರೆ ನಾವು ಅಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನು ಗಟ್ಟಿ ಯಾಗುವುದರಲ್ಲಿ ಸಂಶಯವಿಲ್ಲ. ಹಾಗೆಯೆ ಜನರು ಜಾತಿ ಧರ್ಮ ಹಾಗು ಹಣ ಹೆಂಡ ಮುಂತಾದ ಪ್ರಲೋಭನೆಗಳಿಗೆ ಒಳಗಾಗದೆ ಒಂದು ಒಳ್ಳೆ ಸರ್ಕಾರವನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ದೇಶ ಉದ್ದಾರವಾಗದೆ ಇದ್ದೀತೆ!

3 ಕಾಮೆಂಟ್‌ಗಳು:

  1. ತುಂಬಾ ಚೆನ್ನಾಗಿ ಬರೆದಿದಿರಾ, ಇಂದು ಮಾದ್ಯಮಗಳು ತಮ್ಮ ಜವಾಬ್ದಾರಿ ಮರೆತು ಯಾವುದೇ ಪಬ್ಲಿಕ್ ಇಂಟರೆಸ್ಟ್ ಇಲ್ದೆ ವರ್ತಿಸುತ್ತಿವೆ. ಮಾದ್ಯಮಗಳು ತಮ್ಮ ಜವಾಬ್ದಾರಿ, ಸಮಾಜದಲ್ಲಿ ತಮ್ಮ ಸ್ಥಾನ ಏನು ಅಂಥಾ ತಿಳಿದುಕೋ ಬೇಕು

    ಪ್ರತ್ಯುತ್ತರಅಳಿಸಿ
  2. ಇವತ್ತು ದೇಶದ ನಾಲ್ಕು ಅಂಗಗಳಲ್ಲಿ ಸ್ವಲ್ಪನಾದರೂ ಸರಿಯಾಗಿ ಕೆಲಸ ಮಾಡ್ತಾ ಇರೋದು ಸಂವಿದಾನದ ನಾಲ್ಕನೆ ಅಂಗವಾದ ಮಾಧ್ಯಮಗಳು.ಇವತ್ತು ಮಾಧ್ಯಮಗಳು ಸರಿಯಾಗಿ ಕೆಲಸ ಮಾಡದೇ ಹೋಗಿದ್ದರೆ,ಇತ್ತೀಚಿನ ಯಾವುದೇ ಹಗರಣಗಳು ಬೆಳಕಿಗೆ ಬರುತ್ತಿರಲಿಲ್ಲ..........

    ಪ್ರತ್ಯುತ್ತರಅಳಿಸಿ